Monday, December 13, 2010

ಶ್ರೀ ಅರೋಬಿಂದೋ ಎಂಬ ಅದ್ಯಾತ್ಮಿಕ ದುರಂತ

a ಅರವಿಂದ ಘೋಷ್ ಭಾರತದ ಇತಿಹಾಸದಲ್ಲಿ ಬಹಳ ದೊಡ್ಡ ಹೆಸರು.ಶ್ರೀ ಅರವಿಂದರು ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರನಾಗಿ ಕಲ್ಕತ್ತಾದಲ್ಲಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯು ಅವರಿಗೆ "ಒರೊಬಿಂದೋ ಅಕ್ರಾಯ್ಡ್ ಘೋಷ್" ಎಂಬ ಜನ್ಮನಾಮವನ್ನು ಕೊಟ್ಟರು. ಚಿಕ್ಕವಯಸ್ಸಿನಲ್ಲಿಯೇ ವಿದ್ಯಾಬ್ಯಾಸಕ್ಕಾಗಿ ಅವರನ್ನು ಇಂಗ್ಲೆಂಡಿಗೆ ಕಳುಹಿಸಿದರು . ಇಂಗ್ಲೆಂಡಿನಲ್ಲಿಯೇ ೧೩ ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯಗಳನ್ನು ಅಭ್ಯಸಿಸಿ ಪಾಂಡಿತ್ಯವನ್ನು ಪಡೆದು ಕೊಂಡರು. ಹಾಗೆಯೇ, ಅನೇಕ ಯೂರೋಪೀಯ ಭಾಷೆಗಳಲ್ಲಿಯೂ ಪ್ರವೀಣರಾದರು: ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್, ಜರ್ಮನ್ ಅವರಿಗೆ ತಿಳಿದಿದ್ದ ಕೆಲವು ಭಾಷೆಗಳು. ಅವರು ಐ.ಸಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿಯನ್ನು ತೆಗೆದು ಕೊಳ್ಳದೆ ತಮ್ಮನ್ನು ಅನರ್ಹಗೊಳಿಸಿಕೊಂಡರು. ೧೮೯೩ರಲ್ಲಿ ಅವರು ಭಾರತಕ್ಕೆ ವಾಪಸು ಬಂದು ಬರೋಡದ ಮಹಾರಾಜರ ಆಸ್ಥಾನದಲ್ಲಿ ಕೆಲಸವನ್ನು ಪಡೆದು ಕೊಂಡರು. ಬರೋಡದಲ್ಲಿದ್ದ ಅವಧಿಯಲ್ಲಿ ಅವರು ಭಾರತದ ಸಂಸ್ಕೃತಿ, ಚರಿತ್ರೆ, ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಿದರು ಮತ್ತು ಭಾರತೀಯ ಭಾಷೆಗಳಲ್ಲಿಯೂ (ಬಂಗಾಳಿ, ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿ, ತಮಿಳು) ಪ್ರಭುತ್ವವನ್ನು ಸಂಪಾದಿಸಿದರು. ಈ ಸಮಯದಲ್ಲಿಯೇ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರಾರಂಭಿಸಿ ೧೯೦೬ರಲ್ಲಿ (ಬಂಗಾಳದ ವಿಭಜನೆಯ ನಂತರ) ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಬರೋಡದಲ್ಲಿನ ತಮ್ಮ ಪದಕ್ಕೆ ರಾಜೀನಾಮೆಯಿತ್ತು ಕಲಕತ್ತೆಗೆ ಬಂದು ನೆಲೆಸಿದರು. ಅಲ್ಲಿ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಕಾಲಿಟ್ಟು ಬಂದೇ ಮಾತರಂ ಎಂಬ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ಈ ನಡುವೆಯೇ, ೧೯೦೬ರಲ್ಲಿ, ಯೋಗವೂ ಕೂಡ ಭಾರತದ ಸ್ವಾತಂತ್ರ್ಯ ಸಾಧನೆಗೆ ಶಕ್ತಿಶಾಲಿ ಸಹಾಯಕವಾಗ ಬಹುದೆಂದು ಚಿಂತಿಸಿ ವಿಷ್ಣು ಭಾಸ್ಕರ ಲೇಲೆ ಎಂಬ ಯೋಗಿಯನ್ನು ಸಂಧಿಸಿದರು: ಈ ಯೋಗಿಯು ತಿಳಿಸಿಕೊಟ್ಟ ಕೆಲವು ವಿಧಾನಗಳನ್ನು ಅನುಸರಿಸಿ ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಶ್ರೀ ಅರವಿಂದರು ಹೇಳಿದರು. ಅದೇ ವರ್ಷ, ಅವರು ಅಲೀಪುರದ ವಿಸ್ಫೋಟದ ಪ್ರಕರಣದಲ್ಲಿ ಬಂಧಿತರಾಗಿ, ಒಂದು ವರ್ಷದ ನಡೆದ ವಿಚಾರಣೆಯ ಕಾಲವನ್ನು ಅಲೀಪುರದ ಸೆರೆಯಲ್ಲಿ ಕಳೆದರು: ಈ ಕಾಲದಲ್ಲಿಯೇ ಅವರು ಸಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಹೇಳಿರುವರು. ೧೯೦೯ರಲ್ಲಿ ಖುಲಾಸೆಯಾಗಿ ಇವರ ಬಿಡುಗಡೆಯಾಯಿತು. ಆನಂತರ, ತಮ್ಮ ಅಂತರಾತ್ಮದ ಆದೇಶವನ್ನು ಅನುಸರಿಸಿ ೧೯೧೦ರಲ್ಲಿ ಪುದುಚೇರಿಗೆ ಬಂದು ನೆಲೆಸಿದರು ಮತ್ತು ತಮ್ಮ ಉಳಿದದಿನಗಳನ್ನು ಅಲ್ಲಿಯೇ ಕಳೆದರು.lಸ್ವಾತಂತ್ರ ಸಂಗ್ರಾಮದಲ್ಲಿ ದೊಡ್ಡ ಹೆಸರು ಮಾಡಿದ್ದ ಇವರು ನಂತರ ಭಾರತದ ಅಧ್ಯಾತ್ಮಿಕ ಭೂಪಟದಲ್ಲಿ ಸಹಾ ಅತ್ಯಂತ ದೊಡ್ಡ ಹೆಸರು ಮಾಡಿದ್ದರು. ಆದರೆ ಅವರು ಆರಂಬಿಸಿದ ಅಧ್ಯಾತ್ಮಿಕ ಕ್ರಾಂತಿ ಬಹಳ ದಿನ ಉಳಿಯಲಿಲ್ಲ.ಪಾಂಡಿಚೆರಿಯಲ್ಲಿ ಅವರು ಹಲವು ಕೃತಿಗಳನ್ನು ರಚಿಸಿದರು .
ಅವರ ಕೆಲವು ಕೃತಿಗಳೆಂದರೆ:
ದಿವ್ಯ ಜೀವನ(Life Divine) : ಶ್ರೀ ಅರವಿಂದರ ಪ್ರಮುಖ ತತ್ತ್ವಶಾಸ್ತ್ರ ಕೃತಿ. ಈ ಗ್ರಂಥವು ವಿಶ್ಲೇಷಿಸುವ ಕೆಲವು ವಿಷಯಗಳನ್ನು ಮುಂದೆ ಕೊಟ್ಟಿದೆ: ವಿಕಸನ, ವಿಶ್ವ ಅಭಿವ್ಯಕ್ತಿಯ ಹಲವು ಸ್ತರಗಳು, ಅತೀತ ಮಾನಸ ವಿಕಸನದ ಸಾಧ್ಯತೆಗಳು, ಸನ್ನಿವೇಶಗಳು, ಸೃಷ್ಟಿ-ಸ್ಥಿತಿ-ಲಯ, ಇತ್ಯಾದಿ
ಯೋಗ ಸಮನ್ವಯ(Integral Yoga) - ತಮ್ಮ ಮತ್ತು ಇತರ ಯೋಗಗಳ ವಿಷಯವಾಗಿ ಬರೆದ ಕೃತಿ. ಇತರ ಯೋಗಗಳು ತಮ್ಮ ಯೋಗಕ್ಕೆ ಹೇಗೆ ಪೂರಕ-ಸಾಧಕಗಳಾಗ ಬಹುದೆಂಬುದರ ಮೇಲೆ ಒತ್ತು ಕೊಟ್ಟಿರುವರು.
ಮಾನವ ಚಕ್ರ (Human Cycle)- ಶ್ರೀ ಅರವಿಂದರ ಸಾಮಾಜಿಕ ಮತ್ತು ರಾಜನೀತಿ ವಿಷಯಕ ವಿಶ್ಲೇಷಣೆಗಳು
ವೇದ ರಹಸ್ಯ, ಅಗ್ನಿ ಸೂತ್ರಗಳು - ಶ್ರೀ ಅರವಿಂದರ ವೇದಾರ್ಥ ನಿರೂಪಣೆಯ ಪ್ರಯತ್ನ. ಇವರು ವೇದಗಳನ್ನು ತಮ್ಮ ಅನುಭವಗಳ ಬೆಳಕಿನಲ್ಲಿ ಈ ಗ್ರಂಥಗಳನ್ನು ಹೇಗೆ ಅರ್ಥೈಸಬಹುದೆಂದು ಚರ್ಚಿಸುವರು. ಅಗ್ನಿ ಸೂತ್ರಗಳು ಎಂಬ ಗ್ರಂಥ ಅವರ ಈ ವಿಧಾನದ ನಿದರ್ಶನಗಳು
ಸಾವಿತ್ರಿ - ಶ್ರೀ ಅರವಿಂದರ ಮಹಾಕಾವ್ಯ.
ಯೋಗ ದಾಖಲೆಗಳು - ಶ್ರೀ ಅರವಿಂದರು ೧೯೦೯ರಿಂದ ೧೯೨೭ರ ವರೆಗೆ ದಾಖಲಿಸಿದ್ದ ತಮ್ಮ ಯೋಗ ಸಾಧನಾ ವಿಷಯಕ ಟಿಪ್ಪಣಿಗಳು
ಯೋಗ ಪತ್ರಗಳು (Letters on Yoga)- ಶ್ರೀ ಅರವಿಂದರು ಬರೆದ ಪತ್ರಗಳನ್ನು ಹಲವು ಸಂಪುಟಗಳಲ್ಲಿ ಬೇರೆ ಬೇರೆ ಶೀರ್ಷಿಕೆಗಳಡೆ ವಿಂಗಡಿಸಲಾಗಿದೆ.
ಅವರು ರಚಿಸಿದ ಸಾಹಿತ್ಯರಾಶಿ ಅಗಾದವಾದರೂ ಅವರು ಶಿಷ್ಯರು ಹೇಳುವಂತೆ ಅದರ ರಚನೆಗೆ ಅವರ ಅತಿಮಾನುಷ ಶಕ್ತಿ ಕಾರಣವಿರಲಾರದು.ಯಾಕೆಂದರೆ ಅವರು ಯೋಗವನ್ನು ಕಲಿಯುವ ಮುಂಚೆಯೇ ಹಲವು ವಿಷಯಗಳ ಬಗ್ಗೆ ಹಲವು ಭಾಷೆಗಳಲ್ಲಿ ಅತ್ಯತ್ತಮ ಲೇಖನ ಬರೆಯುವ ಪಾಂಡಿತ್ಯ ಗಳಿಸಿದ್ದರು.
ಅವರು ಅಧ್ಯಾತ್ಮದ ಬಗ್ಗೆ ಬರೆದ ಪುಸ್ತಕಗಳು ಅಷ್ಟೇನೂ "ಬೆಸ್ಟ್ ಸೆಲ್ಲರ್" ಆಗಲಿಲ್ಲ. ಅವರ "ಇಂಟೆಗ್ರಲ್ ಯೋಗ" ಮಾರ್ಗದಲ್ಲಿ ಅಧ್ಯಾತ್ಮಿಕ ಸಾಧನೆ ಮಾಡುತ್ತಿರುವವರ ಸಂಖ್ಯೆ ಸಹಾ ಬಹಳ ಚಿಕ್ಕದು. ಶ್ರೀ ಆರೋಬಿಂದೋ "ದಿ ಲೈಫ್ ಡಿವೈನ್" ಎಂಬ ಪುಸ್ತಕ ಬರೆದರು. ಡಿವೈನ್ ಲೈಫ್ ಎಂದರೆ ಅದು ಅರವಿಂದ ಘೋಶರಿಗೆ ಸಂಬಂದಿಸಿದ ವಿಷಯ ಎಂದು ಹಲವಾರು ಅಂದುಕೊಂಡಿದ್ದಾರೆ.ವಾಸ್ತವವಾಗಿ "ಡಿವೈನ್ ಲೈಫ್ ಸೊಸೈಟಿ" ಎಂಬುದು ಸ್ವಾಮಿ ಶಿವಾನಂದರಿಗೆ ಸಂಬಂದಿಸಿದ ಸಂಸ್ಥೆ. ಭಾರತದ ಅಧ್ಯಾತ್ಮಿಕ ಜಗತ್ತಿನ ಮೊತ್ತಮೊದಲ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದ ಸ್ವಾಮೀ ಶಿವಾನಂದರು ಸಹಾ ಶ್ರೀ ಅರವಿಂದರ ಸಮಕಾಲೀನರು. ಆಗ ಇವರ ಆಶ್ರಮ ರಿಷಿಕೇಶದಲ್ಲಿತ್ತು. ಅರವಿಂದರಿಗಿಂತ ಇವರು ಹಿಂದು ಧರ್ಮ ಪ್ರಚಾರದಲ್ಲಿ ಸಕ್ರಿಯರಾಗಿದ್ದರು.ಇವರು ಒಂದುರೀತಿ ಪ್ರಚಾರಪ್ರಿಯ. ಎಲೆಮರೆಯ ಕಾಯಿಯಂತಿದ್ದ ಅರವಿಂದರು ಪಾಂಡಿಚೇರಿಯ ಮನೆಯಲ್ಲಿ ಸಾಧನೆ,ಬರವಣಿಗೆಯಲ್ಲಿ ಮಗ್ನರಾಗಿದ್ದರು. ಹೊರಗಿನ ಜಗತ್ತಿನೊಂದಿಗೆ ಬರಿಯ ಪತ್ರ ವ್ಯವಹಾರ ಮಾತ್ರ. ಅವರ ಅನುಯಾಯಿ "ಮಾತಾಶ್ರಿ"ಯವರ ಸಾವಿನ ನಂತರ ಶ್ರೀ ಆರೋಬಿಂದೋ ರ ಹೆಸರು ಅದ್ಯಾತ್ಮಿಕ ಜಗತ್ತಿನಿಂದ ಕ್ರಮೇಣ ಮಾಯವಾಗತೊಡಗಿತು. ನಾವು ಇಲ್ಲಿ ಯೋಚಿಸಬೇಕಾದದ್ದು ಇಷ್ಟೇ, ಅಷ್ಟೆಲ್ಲಾ ಕೃತಿಗಳನ್ನು ರಚಿಸಿದ,ಅಷ್ಟೆಲ್ಲಾ ಸಾಧನೆಗೈದ ಈ ಮಹಾನ್ ಚೇತನ ಇಂದು ಅಧ್ಯಾತ್ಮಿಕ ಜಗತ್ತಿನಿಂದ ಮಾಯವಾಗಿರುವುದಕ್ಕೆ ಕಾರಣ ಏನು?, ಇಂದು ಅಧ್ಯಾತ್ಮ ಎಂಬುದು ಒಂದು ಬಹುಕೋಟಿ ಉದ್ಯಮ. ಅಕ್ಷರಾಭ್ಯಸವೇ ಇಲ್ಲದವರು, ಕಳ್ಳರು, ಸುಳ್ಳರು,ವಂಚಕರು,ಅತ್ಯಾಚಾರಿಗಳು,ಅಲ್ಪಜ್ಞಾನಿಗಳು ಇಂತವರೆಲ್ಲರೂ ಕೋಟಿಗಟ್ಟಲೆ ಭಕ್ತರನ್ನು ಆಕರ್ಷಿಸುತ್ತಿರುವಾಗ "ಆರೋವಿಲ್ಲೇ" (ಅರವಿಂದರ ಆಶ್ರಮ) ಯಾಕೆ ಲಾಟರಿ ಹೊಡೀತಿದೆ ಎಂಬ ಯಕ್ಷಪ್ರಶ್ನೆ ನನ್ನನ್ನು ಕಾಡಹತ್ತಿತು.ನಾನು ಪಾಂಡಿಚೆರಿಗೆ ಹೋದದ್ದು 1995 ರಲ್ಲಿ. ಆಗ ಆ ಅಶ್ರಮ ಖಾಲಿ ಹೊಡೆಯುತಿತ್ತು. ಈಗ ಸ್ವಲ್ಪ ಜನಜಂಗುಳಿ ಹೆಚ್ಚಾಗಿರಬಹುದು. ಒಟ್ಟಾರೆ ಕಲ್ಕಿ ಭಗವಾನರ,ನಿತ್ಯಾನಂದರ,ಅಥವಾ ಗಣಪತಿ ಸಚ್ಚಿದಾನಂದರ ಆಶ್ರಮದಲ್ಲಿ ಇರುವಷ್ಟು ಜನಜಂಗುಳಿ ಇರಲಾರದು.
ಯಾಕೆ? ಯಾಕೆ? ಯಾಕೆ?.......
ಆಧ್ಯಾತ್ಮ ಎಂಬುದು ಚೀನಾದ ಸರಕುಗಳಿದ್ದಂತೆ. ಇದು ಅಧಿಕೃತ ಮಾರಾಟಗಾರರಿಂತ ರಸ್ತೆ ಬದಿಯ ವ್ಯಾಪಾರಿಗಳ ಕೈಯಲ್ಲಿ ಚೆನ್ನಾಗಿ ಮಾರಾಟ ಆಗುತ್ತದೆ. ಕಳ್ಳರು ಬಣ್ಣಬಣ್ಣದ ಮಾತನ್ನಾಡಿ ಇಂತಹ ಸರಕುಗಳನ್ನು ಗಿರಾಕಿಗಳಿಗೆ ತಾಗಿಸಬಲ್ಲರು.ಇಂತಹಾ ವಸ್ತುಗಳನ್ನು ಕೊಳ್ಳುವವರಿಗೆ ಶೋ ರೂಮ್ ಗಳೆಂದರೆ ಅಪಥ್ಯ. ಇಂತಹ ಮಾಲನ್ನು ತಯಾರಿಸಲು ಶ್ರೀ ಆರೋಬಿಂದರು ಅವರ ಜೀವಿತಾವಧಿಯ ಅಷ್ಟು ಕಾಲವನ್ನು ವ್ಯಯಿಸಿದ್ದು ಎಂತಹ ದುರಂತ! ಅವರು ಬರೆದದ್ದು ಮಣಗಟ್ಟಲೆ!. ಆದರೆ ಅಧ್ಯಾತ್ಮ ಅರಸಿ ಹೊರಟವರಿಗೆ ಅದು ರುಚಿಸಿದಂತೆ ಕಾಣುತ್ತಿಲ್ಲ.ಅವರಿಂದ ಆಮೇಲೆ ಬಂದವರು ಅರೆಬರೆ ಜ್ಞಾನದಲೇ ಮಿಂಚುತಿದ್ದಾರೆ. ಹಿಂದಿನ ಯಾವುದೊ ಒಂದು ಪೋಸ್ಟ್ ನಲ್ಲಿ ಶ್ರೀ ಅರವಿಂದರ ಬಗ್ಗೆ ಒಂದಿಷ್ಟು ಬರೆದಿದ್ದೆ. ಅದಕ್ಕೆ ಈ ಪೋಸ್ಟ್ ಬರೆಯಬೇಕೆನಿಸಿತು. ಇಂದು ಸಮಾಜ ಬೇಡುವುದು ಅದರ ದುರಾಸೆಗಳನ್ನು ಪೂರೈಸಬಲ್ಲ ಹೊಸ ಹೊಸ ಮಾರ್ಗಗಳನ್ನು. ಅಧ್ಯಾತ್ಮವನ್ನು ಸಹಾ ಒಂದು ಮಾರ್ಗ ಎಂದು ಸಮಾಜ ಪರಿಗಣಿಸಿದರೆ ಅದು ಧರ್ಮಗುರುಗಳ ತಪ್ಪಲ್ಲ!.ವಿಶ್ವಶಾಂತಿಯ ನೆಪದಲ್ಲಿ ನಡೆಸಲಾಗುವ ಎಲ್ಲಾ ಪಠಣ, ಹೋಮ ,ಹವನದ ಹಿಂದೆ ಇರುವುದು ವೈಯುಕ್ತಿಕ ದುರಾಸೆಗಳೇ ಹೊರತು ವಿಶ್ವಶಾಂತಿಯಲ್ಲ. ಅರವಿಂದರು ತನ್ನ ಕಾಣ್ಕೆಗಳನ್ನು ಬರೆದಿಟ್ಟದ್ದೆ ದೊಡ್ಡ ತಪ್ಪಾಯಿತು. ಅವರು ಸುಮ್ಮನೆ ತಪಸ್ಸುಮಾಡಿ,ಸತ್ತುಹೋಗಿದ್ದರೆ ಅವರ ಸಮಾದಿಗೆ ಜನರನ್ನು ಆಕರ್ಷಿಸಿ ಕೋಟಿಕೋಟಿ ಗಳಿಸಬಹುದಿತ್ತೇನೋ? ನಾವು ನಮ್ಮನ್ನ ಕೇಳಿಕೊಳ್ಳಬೇಕಾದ ವಿಷಯ ಏನೆಂದರೆ ನಮಗೆ ಅಧ್ಯಾತ್ಮದಂತಹ ವಸ್ತುವಿನ ಅವಶ್ಯಕತೆ ಇದೆಯೇ?,

No comments: