Wednesday, August 3, 2011

ಕಾಡಿನ ನ್ಯಾಯ

 
http://www.kannadaprabha.com/NewsItems.asp?ID=KPH20110803000827&Title=Headlines&lTitle=%AE%DA%C3%A8%DB%AB%DA+%D1%DA%DF%A6%A7&Topic=0&ndate=8/3/2011&Dist=೦

ಚಿಂತಾಮಣಿ/ಚಿಕ್ಕಬಳ್ಳಾಪುರದಲ್ಲಿ  ಡಕಾಯಿತರೆಂದು ಭಾವಿಸಿ ಗ್ರಾಮಸ್ಥರು ಆಂಧ್ರಪ್ರದೇಶದ ಒಂಬತ್ತು ಮಂದಿಯನ್ನು ಕೊಲೆ ಮಾಡಿದ ಘಟನೆ ಚಿಂತಾಮಣಿ ತಾಲ್ಲೂಕು ಬಾರ್ಲಹಳ್ಳಿ ಮತ್ತು ಯರ್ರಕೋಟೆ ಗ್ರಾಮಗಳಲ್ಲಿ ಮಂಗಳವಾರ ಹಾಡಹಗಲೇ ನಡೆದಿದೆ.
 ಇದನ್ನು ಕನ್ನಡ ಪ್ರಭದಲ್ಲಿ "ಬಿಹಾರ ಸಂಸ್ಕೃತಿಯ ಅಟ್ಟಹಾಸ ಎಂದು ಕರೆಯಲಾಗಿದೆ. ಆದರೆ ಈ ಸಂಸ್ಕೃತಿ ಬಿಹಾರಕ್ಕಷ್ಟೇ ಸೀಮಿತವಲ್ಲ ಎಂಬುದನ್ನು ಮೇಲಿನ ಸುದ್ಧಿ ಸಾಬೀತು ಪಡಿಸುತ್ತದೆ.ನಾಗರಿಕ ಸಮಾಜದಲ್ಲಿ ಇಂತಹಾ ಬರ್ಬರ ಕೃತ್ಯ ನಡೆಯುವುದಕ್ಕೆ ಕಾರಣ ಏನು ?,ಹಿಂದೆ ಕೂಡ ಕಳ್ಳ ಎಂಬ ಕಾರಣಕ್ಕೆ ಮನುಷ್ಯರನ್ನು ಕಂಬಕ್ಕೆ ಕಟ್ಟಿ ಖಾರ ಪುಡಿ ಹಾಕಿ ಅಮಾನುಷವಾಗಿ ಥಳಿಸುವ ದೃಶ್ಯವನ್ನು,ಅದನ್ನು ನೋಡಿ ಅಲ್ಲಿನ ಸ್ತ್ರೀ ,ಮಕ್ಕಳು ,ಮುದುಕರೆಲ್ಲ ಅನಂದಿಸುವುದನ್ನು ನೋಡಿದ್ದೇವೆ.
ಇತ್ತೀಚಿಗೆ ಇಂತಹ ಅಮಾನುಷ ಗಟನೆಗಳು ಗ್ರಾಮೀಣ ಪ್ರದೇಶಗಳಲ್ಲಿ ಏಕೆ ಹೆಚ್ಚಾಗಿ  ನಡೆಯುತ್ತವೆ?.  ನಮ್ಮಲ್ಲಿ ಕೆಲವು ನಗರ ಸಂಸ್ಕೃತಿಯನ್ನು ತೆಗಳುತ್ತ ಹಳ್ಳಿ ಸಂಸ್ಕೃತಿಯನ್ನು ಹೊಗಳುವುದನ್ನು ನೋಡಿದ್ದೇನೆ. ಇದನ್ನು ನಂಬಿ ಹಳ್ಳಿಗೆ ಹೋದವನ ಪಾಡು ದೇವರಿಗೇ ಪ್ರೀತಿ !.
ಪಟ್ಟಣದ ಸಂಸ್ಕೃತಿ ನಿಕ್ರುಷ್ಟವೆಂದು ಹಳ್ಳಿಯ ಸಂಸ್ಕೃತಿ ಬಹಳ ಉತ್ಕೃಷ್ಟವೆಂದು ಹಲವರು ಹೊಗಳುವುದಕ್ಕೆ ಮೂಲಕಾರಣ ಹಳ್ಳಿಯ ಹಿಂಡು ಮನೋಭಾವ.(ಸಹ ಜೀವನ ,ಸಹಬಾಳ್ವೆ ?) ಹಳ್ಳಿಯಲ್ಲಿ ಎಲ್ಲಾ ಒಟ್ಟಾಗಿ ಹಬ್ಬ ಆಚರಿಸುತ್ತಾರೆ. ಒಟ್ಟಾಗಿ ಇರುತ್ತಾರೆ ...ಇತ್ಯಾದಿ ಹೇಳುತ್ತಾರೆ ಅವರ ಭಾಷಣದಲ್ಲಿ . ಒಟ್ಟಾಗಿ ಕೊಲೆ ಕೂಡ ಮಾಡುತ್ತಾರೆ ಎಂಬುದನ್ನು ಸಹ ಸೇರಿಸಬೇಕಾಗಿದೆ. ಇದು ಸಹಬಾಳ್ವೆ ,ಸಹಜೀವನವಲ್ಲ. ಇದು ಇನ್ನೊಬ್ಬನನ್ನು ತಮ್ಮ ನಡುವೆ ಬಿಟ್ಟುಕೊಳ್ಳಲಾರದ ಸಂಕುಚಿತ ಮನಸ್ತಿತಿ ಇದಕ್ಕೆ ಹಲವು ಕಾರಣಗಳಿವೆ.
 ನಮ್ಮ ಹಳ್ಳಿಯ ಪಂಚಾಯತಿಗಳನ್ನು ವ್ಯವಸ್ಥೆಯನ್ನು ಸಿಕ್ಕಾಪಟ್ಟೆ ಹೊಗಳುವವರಿದ್ದಾರೆ. ಪಂಚಾಯತ್ ವ್ಯವಸ್ಥೆ ಬಂದರೆ  ದೇಶದ ಎಲ್ಲ ಸಮಸ್ಯೆಗಳು ಮಂಜುಗಡ್ಡೆಯಂತೆ ಕರಗುತ್ತದೆಯೆಂದು ತಜ್ಞರು  ಬಹಳ ಹಿಂದಿಂದ ಹೇಳುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲ. ಅದಕ್ಕೆ ಪ್ರಾಚೀನ ಭಾರತದ ಉದಾಹರಣೆ ಕೂಡ ನೀಡುತಿದ್ದರು. ಇಂದು ಆ ಪಂಚಾಯಿತಿಗಳು 'ಮರ್ಯಾದಾ ಹತ್ಯೆಯ' ಪ್ರಮುಖ ಬಲಿಪೀಠವಾಗಿದೆ. ಕರ್ನಾಟಕದಲ್ಲಿ ಪಂಚಾಯತ್ ರಾಜ್  ವ್ಯವಸ್ಥೆ ಬ್ರಷ್ಟಾಚಾರದ ತೊಟ್ಟಿಲು.  ಯಾವುದೇ ಉದಯೋನ್ಮುಖ ರಾಜಕಾರಿಣಿಯನ್ನು,ಅಧಿಕಾರಿಯನ್ನೂ "ನೀನು ಯಾವ ಕ್ಷೇತ್ರದಲ್ಲಿ ದುಡಿಯಲು ಇಷ್ಟ ಪಡುತ್ತೀಯ ?"ಎಂದು ಕೇಳಿದರೆ ಅವನು/ಅವಳು  "ನಾನು ಗ್ರಾಮೀಣ ಅಭಿವೃದ್ದಿ ಕ್ಷೇತ್ರದಲ್ಲಿ  ದುಡಿಯಲು ಇಷ್ಟ ಪಡುತ್ತೇನೆ ಎನ್ನುತ್ತಾನೆ . ಅದು ಅವರ ಕಾರ್ಯತತ್ಪರತೆ ಯನ್ನು ತೋರಿಸುವುದಿಲ್ಲ . ಈ ಕ್ಷೇತ್ರದಲ್ಲಿ ಅಷ್ಟು ಲಾಭ ಇದೆ!.ಹಳ್ಳಿಗಳಲ್ಲಿ ಮತಗಳನ್ನು ಕ್ರೋಡಿಕರಿಸುವುದು ಸುಲಭದ ಕೆಲಸ. ಅಲ್ಲಿನ ಜನರ ಭಾವನೆಗಳಿಗೆ ಸ್ಮಂದಿಸಿದರೆ ಮುಗಿಯಿತು. ಇಲ್ಲಿನ ಜನರ ಭಾವನೆಗಳು ಸಾಮಾನ್ಯವಾಗಿ ಜಾತೀಯತೆ ,ಧರ್ಮ, ಗುಂಪುಗಾರಿಕೆ ,ಮೂಡನಂಬಿಕೆಗಳಲ್ಲಿ ಬೇರು ಬಿಟ್ಟಿರುತ್ತದೆ.ಅವನ್ನು ಕೀಳುವುದಕ್ಕಿಂತಲೂ ಅವಕ್ಕೆ ನೀರೆರೆಯುವುದು ಸುಲಭ ತಾನೇ.ಇದಕ್ಕೆ ಅಲ್ಲಿನ ಜನರ, ಧಾರ್ಮಿಕ ನಾಯಕರ , ಗ್ರಾಮೀಣ ಸಂಸ್ಕೃತಿ ಪ್ರತಿಪಾದಕರ ಸಂಪೂರ್ಣ ಬೆಂಬಲ ಕೂಡ ಸಿಗುತ್ತದೆ. ಆದುದರಿಂದ ರಾಜಕಾರಣಿ ಈ ಕೆಲಸ ಮಾಡುತ್ತಾನೆ.ಇದೆ ಪ್ರಕ್ರಿಯೆಯನ್ನು ನಗರದ makeshift ಹಳ್ಳಿಗಳಲ್ಲಿ (ಸ್ಲಂ)ಗಳಲ್ಲಿ ಪ್ರಯೋಗಿಸುತ್ತಾರೆ.
 ಇಂದು ಈ ಸಂಸ್ಕೃತಿ ಬೆಳೆದು ಹೆಮ್ಮರವಾಗಿದೆ. ವೋಟುಗಳನ್ನು ಮಾರಿಕೊಳ್ಳುವುದು. ದೇವರ ದಿಂಡರ ಹೆಸರಿನಲ್ಲಿ ಜಾತ್ರೆ ಉತ್ಸವ ಮಾಡಿ ಹಣ ದೋಚುವುದು ಇತ್ಯಾದಿ. ಇಂದು ಅದು ಸಂಪ್ರದಾಯ,ಸಂಸ್ಕೃತಿಯ ಹೆಸರಿನಲ್ಲಿ ಕೊಲೆಗಳನ್ನು ಕೂಡ ಮಾಡುವ ಮಟ್ಟಕ್ಕೆ ಬಂದುನಿಂತಿದೆ. ಇನ್ನು ಮುಂದೆ ಯಾವ ಹಂತಕ್ಕೆ ತಲುಪುತ್ತದೋ ಗೊತ್ತಿಲ್ಲ.