Friday, August 20, 2010

ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಂಡಂತೆ....

ದಿನಾಂಕ ೪-೮-೨೦೧೦ ಶ್ರೀ ಮಾನ್ ಸುರೇಶ್ ಕುಮಾರ್ ರವರು ಐ ಎ ಎಸ್.ಅಧಿಕಾರಿ,ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಶ್ರೀ ರಂಗನಾಥ ಸಾಹೇಬರ ಬಗ್ಗೆ ಲೇಖನ ಬರೆದಿದ್ದರು . ಅದು ಬಹಳ ಹೃದಯ ಸ್ಪರ್ಷಿಯಾಗಿತ್ತು. ಐ ಎ ಎಸ್ ಅಧಿಕಾರಿಗಳಿಗೂ ಸಾಮಾನ್ಯ ಜನರಿಗಿರುವಂತಹಾ ಕಷ್ಟಗಳು ಕಾಡುತ್ತವೆ ಎಂದು ಆಗ ಜನಕ್ಕೆಲ್ಲಾ ಗೊತ್ತಾಯಿತು. ಆದರೆ ಸುರೇಶ್ ಕುಮಾರರಂತಹಾ ಮಂತ್ರಿಗಳಿಗೆ  ಮಾತ್ರ ಜನ ಸಾಮಾನ್ಯರ ಕಷ್ಟಗಳು ಅರ್ಥವಾಗುವುದಿಲ್ಲ.

ಪಾಪ, ರಂಗನಾಥರ ಕಷ್ಟ ನೋಡಿ, ಅವರಿಗೆ ಇಷ್ಟೆಲ್ಲಾ ಸಮಸ್ಯೆಗಳು ಇವೆ ಎಂದು ಗೊತ್ತಿದ್ದರೂ ಕೂಡ ಅವರಿಗೆ ಮುಖ್ಯ ಕಾರ್ಯದರ್ಶಿಯಂತಹಾ ಗುರುತರ ಜವಾಬ್ಧಾರಿಯನ್ನು  ನೀಡಿ ಹಿಂಸಿಸುತ್ತಿರುವ ಬಿ ಜೆ ಪಿ ಸರ್ಕಾರದ ಹೃದಯ ಹೀನತೆಯನ್ನೇನನ್ನೋಣ ?,ಇದು ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಂಡತಾಗಿದೆ.ತಮ್ಮ ನೌಕರರ ಯೋಗಕ್ಷೇಮದ ಬಗ್ಗೆ ಈ ಸರ್ಕಾರಕ್ಕೆ ಎಷ್ಟು ಕಾಳಜಿ ಇದೆ ಎಂಬುದು ಇದರಲ್ಲೇ ಗೊತ್ತಾಗುತ್ತದೆ.
ಇತರ ಹಿರಿಯ ಅಧಿಕಾರಿಗಳ ಹಿರಿತನ  ಕಡೆಗಣಿಸಿ  ಶ್ರೀ ರಂಗನಾಥರಿಗೆ  ಮುಖ್ಯ ಕಾರ್ಯದರ್ಶಿ ಮಾಡಿದ್ದೆ ಈ ಬಿ ಜೆ ಪಿ. ಸಿ ಎಂ ಗೆ ಕಿವುಡು ಎಂದು ಎಲ್ಲರಿಗೂ ಗೊತ್ತು. ಆದರೆ ಅವನಿಗೇನು  ಕಣ್ಣು ಕಾಣುವುದಿಲ್ಲವೇ?, (ಚಿಕ್ಕ "font "ನಲ್ಲಿ ಟೈಪ್ ಮಾಡಿದ ಕಡತ ಕೊಟ್ಟರೆ ಸಿ ಎಂ ಕೂಗಾಡುತ್ತಾನೆ ಎಂದು ಸಚಿವಾಲಯದ ಸಿಬ್ಬಂದಿಗಳು ಹೇಳುತ್ತಾರೆ). ಒಟ್ಟಾರೆ ದುಡಿಯುವ ಕತ್ತೆಗೆ ಕೆಲಸ ಹೆಚ್ಚು ಎಂಬುವುದು ಸರ್ಕಾರದ ಹಂತದಲ್ಲಿ ಪ್ರಚಲಿತವಾಗಿರುವ ನಾಣ್ನುಡಿ.   ವಿಧಾನಸೌಧದಲ್ಲಿ ದುಡಿಯುವ ಕತ್ತೆಗಳು ದುಡಿಯುತ್ತಲೇ ಇರುತ್ತವೆ. ಇನ್ನುಳಿದ ಕುದುರೆಗಳು ಹನ್ನೊಂದು ಗಂಟೆಗೆ ಅನ್ದಲ್ಲಾಡಿಸುತ್ತಾ ಕಚೇರಿಗೆ ಬಂದು ಐದು ಗಂಟೆಯಷ್ಟೊತ್ತಿಗಾಗಲೇ ಬಸ್ ನಲ್ಲಿ ಕೂತಿರುತ್ತವೆ!
ಹೀಗೆ ಪತ್ರಿಕೆಗಳಿಗೆ ಲೇಖನಬರೆಯುತ್ತಾ ಕಾಲಹರಣ ಮಾಡುವುದಕ್ಕಿಂತ ತನ್ನ ಖಾತೆಗೆ ಸಂಬಂದಿಸಿದ ವಿಷಯಗಳ ಬಗ್ಗೆ ಗಮನಹರಿಸುವುದು ಸುರೇಶ್ ಕುಮಾರ್ ರವರಿಗೆ ಹೆಚ್ಚಿನ ಶೋಬೆ ತರುತ್ತದೆ. ಅವರದು ನಗರಾಬಿವೃದ್ದಿ ಖಾತೆ.  ಮೊನ್ನೆ "ಭಂಗಿ ಸಮುದಾಯದವರು ಮಲಾಭಿಷೇಕ ಮಾಡಿಕೊಂಡಾಗ ಅವರು ಸೊಲ್ಲೆತ್ತಲಿಲ್ಲ. ಪೌರಾಡಳಿತ ಖಾತೆ ಅವರ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಸುಮ್ಮನಿರಬಹುದು. ಆದರೆ ಅದೇ ರೀತಿಯ ಸಮಸ್ಯೆಗಳು ಅವರ ಖಾತೆಯಲ್ಲೂ ಇವೆ. ಇಂದು ಕರ್ನಾಟಕ ಸರ್ಕಾರದ ಸಚಿವಾಲಯದ ಬ್ರಷ್ಟಾತಿಬ್ರಷ್ಟರನ್ನು ಒಂದೆಡೆ ಗುಡ್ಡೆಹಾಕಿ ಮಂಪರು ಪರೀಕ್ಷೆಗೆ ಒಳಪಡಿಸಿ ನಿಮಗೆ ಯಾವ ಖಾತೆ ಬೇಕು ಎಂದು ಕೇಳಿದರೆ ಅವರು "ನಮಗೆ U D ಬೇಕು ಎಂದು ಹೇಳುತ್ತಾರೆ. U D  ಎಂದರೆ Urban Development  ಎಂದು. ಇದು ಬ್ರಷ್ಟಾಚಾರದ ಕೂಪ. ಜಾಸ್ತಿ ಗಾಂಚಲಿ ಮಾಡಿದರೆ ಪ್ರಧಾನ ಕಾರ್ಯದರ್ಶಿಯನ್ನೇ ಎತ್ತಂಗಡಿ ಮಾಡಿಸುವ ಶಕ್ತಿ ಇಲ್ಲಿನ ಗುಮಾಸ್ತರಿಗಿದೆ. ಇಲ್ಲಿನ ಕಳ್ಳರನ್ನು ಒದ್ದೋಡಿಸಿ ಒಂದು ಉತ್ತಮ ಟೀಂ ಮಾಡಿಕೊಂಡು ಒಳ್ಳೆಯ ಆಡಳಿತ ನೀಡುವ ಕೆಪಾಸಿಟಿ ಸಚಿವರಿಗಿಲ್ಲ. ತಮ್ಮ ಮನೆಯನ್ನು ತಾನು ಸರಿ ಮಾಡಿಕೊಳ್ಳಲು ಸಾಧ್ಯವಾಗದೆ ಕುಳಿತುಕೊಂಡು ಪತ್ರಿಕೆಗಳಿಗೆ ಲೇಖನ ಬರೆಯುವುದರಲ್ಲಿ ಸಚಿವರು ಮಗ್ನರಾಗಿದ್ದಾರೆ. ನನಗೆ ಈಗ ಬಸವಣ್ಣನವರ ವಚನ ನೆನಪಾಗುತ್ತಿದೆ.
ತಮ್ಮ ತಮ್ಮ ಮನವ ಸಂತೈಸಿಕೊಳ್ಳಿ...
ತಮ್ಮ ತಮ್ಮ ತನುವ ಸಂತೈಸಿಕೊಳ್ಳಿ ...