Tuesday, September 21, 2010

ಪುಟ್ಟರಾಜ ಗವಾಯಿಗಳ ಮಾದರಿ

ನಿನ್ನೆ ಗದಗದ ಪುಟ್ಟರಾಜ ಗವಾಯಿಗಳು ಸಾವನಪ್ಪಿದರು. "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು"ಎಂಬ ಏಸು ಕ್ರಿಸ್ತನ ವಾಣಿಯಂತೆ ಕಣ್ಣನ್ನು ಕಿತ್ತುಕೊಂಡು ಅನ್ಯಾಯ ಮಾಡಿದ್ದ ಭಗವಂತನನ್ನು ಕ್ಷಮಿಸಿ ಆ ಭಗವಂತನ ಹೆಸರಿನಲ್ಲಿ ಹಲವು ಜನಕ್ಕೆ ಒಳ್ಳೆದಾಗುವಂತಹ ಕೆಲಸವನ್ನು ಮಾಡಿದರು. ಹಲವು ಶಿಷ್ಯರಿಗೆ ಆಶ್ರಯನೀಡಿದರು.ಬದುಕನ್ನು ಸನ್ಯಾಸಿಯಾಗಿಯೇ ಕಳೆದರು.
 ದೇವರು ಅವರೊಂದಿಗೆ ಇರಲಿಲ್ಲ. ಒಂದುವೇಳೆ ಅವನು ಇದ್ದರೆ ಅವನು ಇರುವುದು ಬ್ರಷ್ಟ್ರರ ಕಡೆ ಮತ್ತು ಅಯೋಗ್ಯರ ಕಡೆ.ಅವನು/ಅವನ ಬೆಂಬಲಿಗರು ಕೆಡಿಸುವ ಸಮಾಜವನ್ನು ಸುದಾರಣೆ ಮಾಡುವಂತಹ ಜನರಿಗೂ ಅವನ ಹೆಸರು ಹೇಳಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಇದೆ. ಇದು ಎಲ್ಲಾ ಕಾಲಕ್ಕೋ ಸತ್ಯ. ಸೂಫಿ ಸಂತರಿರ ಬಹುದು. ಭಕ್ತಿ ಸಂತರಿರಬಹುದು. ಅವರುಗಳು ಕೆಲವು ಒಳ್ಳೆಯ ಕೆಲಸ ಮಾಡಿದರು.ಅದನ್ನು ದೇವರಿಗೆ ಆರೋಪಿಸಿದರು. ಜನರ ಚಿಂತನೆಯ ದಿಕ್ಕನ್ನು ಬದಲಾಯಿಸಲು ನಂಬಿಕೆಯ ಊರುಗೋಲು ಅತಿ ಅವಶ್ಯಕ. ಏಕೆಂದರೆ ಜನರ ಮನಸ್ಸು ಮೌಡ್ಯದ ಕೆಸರಲ್ಲಿ ಹೂತು ಹೋಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಅನಿವಾರ್ಯತೆ ಎಲ್ಲಾ ಸಮಾಜ ಸುದಾರಕರಿಗಿತ್ತು. ಲಿಂಗ ತೋರಿಸಿದರೆ ಯಡಿಯೂರಿ ಕಾಸು ಬಿಚ್ಚುತ್ತಾನೆ. ಗಾಂಧಿ ಪ್ರತಿಮೆ ತೋರಿಸಿದರೆ ಬಿಚ್ಚುತ್ತಾನ? ಖಂಡಿತಾ ಇಲ್ಲ. ಅದಕ್ಕಾಗಿಯೇಇರಬೇಕು ಪವಾಡ ಪುರುಷನೆಂದು ಹೆಸರು ಗಳಿಸಿದ್ದ ಅಲ್ಲಮನನ್ನು ಕರೆದುಕೊಂಡು ಬಂದು ವಿಚಾರಮಂಟಪದ ಅಧ್ಯಕ್ಷನನ್ನಾಗಿಸಿದರು. ಕೊನೆಗೆ ಅಲ್ಲಿ ಆರ್ಥಿಕ ವಿಚಾರಕ್ಕಿಂತ ಪಾರಮಾರ್ಥಿಕ ವಿಚಾರಗಳಿಗೆ ಒತ್ತು ನೀಡಲಾಯಿತು. ಇದರಿಂದ ಬಸವಣ್ಣನ ಕ್ರಾಂತಿಗೆ ಯಾವುದೇ ಉಪಯೋಗವಾಗಲಿಲ್ಲ. ಕಲ್ಯಾಣದ ಕ್ರಾಂತಿಗೆ ಶಕ್ತಿಕೇಂದ್ರವಾಗಬಹುದಿದ್ದ ಈ ವಿಚಾರಮಂಟಪ ಸೋಮಾರಿಗಳ ಪಾರಮಾರ್ಥಿಕ ಕಾಡುಹರಟೆಯ ರಂಗಸ್ಥಳವಾಯಿತು. ಕ್ರಾಂತಿ ವಿಫಲವಾಯಿತು. ಬಸವಣ್ಣ ಸೋಲುಣ್ಣಬೇಕಾಯಿತು. ನಂತರ ಈ ವಿಚಾರ ಮಂಟಪಗಳು ಮಠ ಗಳಾದವು. "ಮಠ" ಚಿತ್ರದ ಟೈಟಲ್ "ಕೆಲಸಕ್ಕೆ ಕರೀಬೇಡಿ,ಊಟಕ್ಕೆ ಮಾತ್ರ ಮರಿಬೇಡಿ"ಎಂಬುದನ್ನೇ ಈ ಸ್ವಾಮೀಜಿಗಳು ತಮ್ಮ ಜೀವನದ ಧ್ಯೇಯವಾಕ್ಯ ಮಾಡಿಕೊಂಡಿದ್ದರು. ಶತ ಶತಮಾನಗಳವರೆಗೆ ಹಾಗೇ ಇತ್ತು. ಕ್ರಿಸ್ತಿಯನ್ನರು ಬಂದು ಇಲ್ಲಿ ಹಣ ಹೂಡಿ ಶಾಲೆಗಳನ್ನು ತೆಗೆದಕೂಡಲೇ ಇವರು ಸಹ ಎಚ್ಚೆತ್ತು ಶಾಲೆಗಳನ್ನು ಓಪನ್ ಮಾಡತೊಡಗಿದರು. ಈ ಸೇವಾ ಮನೋಬಾವವೂ ಹೆಚ್ಚು ದಿನ ಉಳಿಯಲಿಲ್ಲ. ಪಾರಮಾರ್ಥಿಕ ಸೋಮಾರಿತನದ ಬುದ್ದಿ ಮತ್ತೆ ಮುಸುಕಿನಿದ ಇಣುಕತೊಡಗಿತು. ಹುಟ್ಟುಗುಣ ಸುಟ್ಟರೆ ಹೋಗುತ್ತದೆಯೇ? ಎಂಬ ಗಾದೆಯಂತೆ ಶಿಕ್ಷಣವು "ಶಿಕ್ಷಣ ಮಾಫಿಯಾ"ಆಯಿತು. ಶಾಲೆಗಳು ಬೋದಕರ,ಶಿಕ್ಷಣ ತಜ್ಞರ ಸ್ವತ್ತಾಗಲಿಲ್ಲ.ಶಿಕ್ಷನೋದ್ಯಮಿಗಳ ಸ್ವತ್ತಾಯಿತು.ದಾರ್ಮಿಕ ನಾಯಕರು ಜ್ಞಾನವನ್ನು ಗುತ್ತಿಗೆ ಹಿಡಿದಂತೆ ವರ್ತಿಸಿದ್ದೆ ಇದಕ್ಕೆ ಮುಖ್ಯ ಕಾರಣ.
ಪುಟ್ಟರಾಜ ಗವಾಯಿಗಳಿಗೆ ಸಂಗೀತ ಶಾಲೆ ತೆಗೆಯಬೇಕು ಅನ್ನಿಸಿತು. ಇಂಜಿನಿಯರಿಂಗ್ /ಮೆಡಿಕಲ್ ಕಾಲೇಜು ತೆಗೆಯಬೇಕು ಅನ್ನಿಸಲಿಲ್ಲ. ಏಕೆಂದರೆ ಅವರಿಗಿದ್ದದ್ದು ನಿಜವಾದ ಜ್ಞಾನ. ಅದನ್ನು ಅವರು ಪ್ರಾಮಾಣಿಕವಾಗಿ ಹಂಚಿದರು. ತನ್ನಲಿದ್ದದ್ದನ್ನು ಎಲ್ಲರಿಗೂ ಹಂಚಿದರು. (ಇಲ್ಲಿ ನಾವು ಮಲ್ಲಾಡಿ ಹಳ್ಳಿಯ ಸ್ವಾಮೀಜಿಯನ್ನು ನೆನೆಸಿಕೊಳ್ಳಬಹುದು.) ಆದರೆ ಕೆಲವು ಸ್ವಾಮೀಜಿಗಳಿಗೆ ಮೆಡಿಕಲ್ ಸೈಯನ್ಸ್ ಆಗಲಿ ಇಂಜಿನಿಯರಿಂಗ್ ಆಗಲಿ ಪಾಠಮಾಡಲು ಬರುವುದಿಲ್ಲ. ಆದರೂ ಇನ್ಜಿನೆರಿಂಗ್ /ಮೆಡಿಕಲ್ ಕಾಲೇಜ್ ತೆಗೆಯುವ ತೆವಲು. ದುಡ್ಡು ಸರ್ಕಾರದ್ದು,ಹೆಸರು ಇವರದ್ದು. ನೀಡಲಾಗುವ ಜ್ಞಾನ ವಿದೇಶದ್ದು!. ದುರಂತ ಎಂದರೆ ಇಂತಾ ದೊಡ್ಡ ಮಾಫಿಯಾಗಳ ಶಿಕ್ಷಣ ಸಂಸ್ತೆಗಳಿಗೆ ರಾಷ್ಟ್ರಪತಿಗಳು ಬರುತ್ತಾರೆ.
"In rome,be a Roman" ಎನ್ನುವಂತಹಾ ಇಂದಿನ ಪರಿಸ್ತಿತಿಯಲ್ಲಿ ಗವಾಯಿಗಳು ನಡೆದ ಹಾದಿಯಲ್ಲಿ ಇತರರು ನಡೆಯುವುದರಿಂದ ಏನಾದರೂ ಉಪಯೋಗವಿದೆಯೇ?  

No comments: