Wednesday, August 19, 2009

ಅತಿಥಿ ಮತ್ತು ಅವನ ತಿಥಿ . -ಕೆಲಸ ಇದ್ದಾಗ ಮರೀಬೇಡಿ ,ಊಟಕ್ಕೆ ಮಾತ್ರ (ನನ್ನನ್ನು)ಕರಿಬೇಡಿ !



ಒಂದು ಪಂಚತಂತ್ರ ಕಥೆ ಇದೆ. ಒಂದು ನರಿ ಕೊಕ್ಕರೆಯನ್ನು ಮನೆಗೆ ಊಟಕ್ಕೆ ಆಹ್ವಾನಿಸುತ್ತದೆ. ಅದು ಕೊಕ್ಕರೆಗೆ ಇಷ್ಟವಾದ ಖಾದ್ಯವನ್ನು ಮಾಡಿಸಿರುತ್ತದೆ. ಆದರೆ ಅದನ್ನು ಒಂದು ತಟ್ಟೆಯಲ್ಲಿ ಬಡಿಸುತ್ತದೆ. ಕೊಕ್ಕರೆಯ ಕೊಕ್ಕು ಉದ್ದ. ತಟ್ಟೆಯಲ್ಲಿ ಕೊಕ್ಕರೆಗೆ ತಿನ್ನಲು ಆಗದು.ನರಿ ಹೇಳುತ್ತದೆ ,ಕೊಕ್ಕರೆಯಣ್ಣ,ಕೊಕ್ಕರೆಯಣ್ಣ ,ನಿನಗೆ ಇಷ್ಟವಾದ ತಿಂಡಿ ಮಾಡಿದ್ದೇನೆ .ಚೆನ್ನಾಗಿ ತಿನ್ನು . ಸರಿ, ಕೊಕ್ಕರೆಗೆ ತಿಂಡಿಯನ್ನು ನೋಡಿ ಬಾಯಲ್ಲಿ ನೀರು,ತಟ್ಟೆ ನೋಡಿ ಕಣ್ಣಲ್ಲಿ ನೀರು ! ಅದಕ್ಕೆ ಬೇಜಾರಾಗುತ್ತದೆ. ಸರಿ ನಿನಗೆ ಬುದ್ದಿ ಕಲಿಸುತ್ತೇನೆ ಅಂತ ಸಿಟ್ಟಿನಿಂದ ತೆರಳುವ ಅದು ನರಿಯನ್ನು ಊಟಕ್ಕೆ ಕರೆದು ತಾನು ತಿನ್ನುವಂತಹ ಅಗಲ ಕಡಿಮೆ,ಉದ್ದ ಹೆಚ್ಚಿರುವ ಪಾತ್ರೆಯಲ್ಲಿ ಪಾಯಸ ಕೊಟ್ಟು ಸೇಡು ತೀರಿಸಿಕೊಳುತ್ತೆ. ಈ ಕಥೆ ಓದಿದಾಗ ನನಗೆ ನಾನು ಆಥಿತ್ಯ ಸ್ವೀಕರಿಸಲು ಹೋಗಿ ಪಜೀತಿಗೀಡಾದ ಕೆಲವು ಪ್ರಸಂಗಗಳು ನೆನಪಿಗೆ ಬರುತ್ತಿದೆ.
ಮೇಲಿನ ಕಥೆಯನ್ತಲ್ಲದಿದ್ದರೂ ,ಆಹ್ವಾನನೀಡುವವರದ್ದು ಸದುದ್ದೇಶವೇ ಆದರೂ ನಿಮ್ಮ ಕಾಲ,ದೇಶ,ಪರಿಸ್ತಿತಿಗಳಿಂದಾಗಿ ಕೆಲವು ಸಮಸ್ಯೆ ಉದ್ಬವವಾಗುವ ಸಾಧ್ಯತೆಗಳಿರುತ್ತವೆ. "ಒಬ್ಬ ಮನುಷ್ಯನ ಆಹಾರ ಇನ್ನೊಬ್ಬನಿಗೆ ವಿಷವಾಗಬಹುದು." ಆದರೆ ಎಲ್ಲರು ಒಂದೇ ಥರ ಇರುತ್ತಾರೆ ಎನ್ನುವ ನಂಬಿಕೆಗಿಂತಾ ಎಲ್ಲರು ಒಂದೇ ತರಹ ಇರಬೇಕು ಎಂಬ ಅಸಹಿಷ್ಣು ಮನೋಭಾವದಿಂದಾಗಿ ಒಬ್ಬ ಇನ್ನೊಬ್ಬನನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ.
ಕೆಲವರಿಗೆ ಔತಣ ಕೊಡುವುದೆಂದರೆ ಬಹಳ ಖುಷಿ. ಅತಿಥಿದೇವೋಭವ ಎಂಬುವ ಕಡೆ ಅದು ಇರಬೇಕಾದ್ದೇ ಬಿಡಿ. ಆದರೆ ಕೆಲವರು ಇದನ್ನು ಕಾರ್ಯರೂಪಕ್ಕೆ ಇಳಿಸುವ ವೈಖರೀ ನೋಡಿದರೆ ಭಯವಾಗುತ್ತದೆ." ನಮ್ಮಲ್ಲಿ _____ ಸಮಾರಂಭ ಇದೆ. ನೀವು ಬರಲೇಬೇಕು" ಎಂದು ಹೇಳುತ್ತಾರೆ. ಸಮಾರಂಭ ನಡೆಯುವ ಸ್ಥಳ ನಿಮಗೆ ಏಷ್ಟು ದೂರ ಇದ್ದರು ಪರವಾಇಲ್ಲ .ಅಲ್ಲಿ ಹೋಗಿಬರುವ ಪ್ರಕ್ರಿಯೆಯಲ್ಲಿ ನಿಮ್ಮ ಹೆಣಬಿದ್ದರೂ (ಅವರಿಗೆ)ಚಿಂತೆ ಇಲ್ಲ.ನಿಮ್ಮ ಅನುಕೂಲ ,ಅನಾನುಕೂಲಗಳ ಬಗ್ಗೆ ಕಿಂಚಿತ್ತೂ ಆಲೋಚಿಸುದಿಲ್ಲ. ಓ ಅದಕ್ಕೇನು?, ಬಹಳ ಸುಲಭ ,ಬೇಕಾದಷ್ಟು ಬಸ್ ಇದೆ, ಎಲ್ಲ ವ್ಯವಸ್ಥೆ ಇದೆ ಇತ್ಯಾದಿ ಮಾತುಗಳು ಆಶ್ವಾಸನೆಯ ರೂಪದಲ್ಲಿ ಸಿಗುತ್ತದೆ.

ಅವರ ಆತಿಥ್ಯದ ಸಂಭ್ರಮದಲ್ಲಿ ಎಷ್ಟೋ ಸಾರಿ ನನಗೆ ಬಸ್ ಮಿಸ್ ಆಗಿದೆ. ಪಾರ್ಟಿ ಮಾಡುವ ಗಮ್ಮತ್ತಿನಲ್ಲಿ ಬೇಕಾದಷ್ಟು ಪರಿಪಾಟಲು ಪಟ್ಟಿದ್ದೇನೆ. "ಆಮೇಲೆ ಬೇಕಾದರೆ ಅವನು ಸುಡುಗಾಡಿಗಾದರೂ ಹೋಗಲಿ ,ಆದರೆ ಈಗ ನಾವು ಅವರನ್ನು ಸಿಕ್ಕಾಪಟ್ಟೆ ಸಂತೋಷ ಗೊಳಿಸೋಣ ಎಂಬುದು ಅತಿಥೇಯರ ನಿಲುವು.

ನಮಗೆ ಇಷ್ಟೆಲ್ಲಾ ಪಜೀತಿ ಆದರೆ ಅವರಿಗೆ "ಮನಸ್ಸಂತೋಷ" ವಾಗುತ್ತದಂತೆ. ಹಾಗೆಂದು ಕೆಲವರು ಪ್ರಿಂಟ್ ಹಾಕಿಸುತ್ತಾರೆ invitation ಮೇಲೆ.!.

ಆದರೆ ಕೆಲವು ಸಮಾರಂಭಗಳು ಬರಿ ಸತ್ಕಾರಕೂಟವಾಗಿರುವುದಿಲ್ಲ. ಮುಯ್ಯಿಗೆ ಮುಯ್ಯಿ ತೀರಿಸುವ ಜಿದ್ದಾಜಿದ್ದಿನ ಕ್ರೀಡೆಯಾಗಿರುತ್ತದೆ. ನಾವು ಅವರಲ್ಲಿಗೆ ಹೋದಾಗ ಅವರು ನಮ್ಮನ್ನು ಬಹಳ "ಚೆನ್ನಾಗಿ" ನೋಡಿಕೊಂಡಿದ್ದರು .ಅವರು ಇಲ್ಲಿ ಬಂದಾಗ ಹಾಗೆ ನೋಡಿಕೊಳ್ಳಬೇಕು ಎಂಬ ಕೃತಜ್ಞತೆ ಭಾವ ಸಹ ಅದರೊಂದಿಗೆ ಮಿಳಿತವಾಗಿರುತ್ತದೆ.

ಅಲ್ಲಿಗೆ ಹೋಗದಿದ್ದರೆ ಅವರು ನಿಮಗೆ ಮತ್ತೆ ಸಿಕ್ಕಾಗ ಅವರು ಆಡುವ ನಾಟಕ ನೋಡಬೇಕು!! ಅವರಾದರೂ ಓಕೆ .ಇನ್ನು ಕೆಲವರು ಅವರು ಕರೆದಿದ್ದ ಸಮಾರಂಭಕ್ಕೆ ಹೋಗದೆ ಇದ್ದಾರೆ ನಿಜವಾಗಲೂ ಸಿಟ್ಟಿಗೆದ್ದು ವಿನಾಕಾರಣ ಹಗೆ ಸಾದಿಸುತ್ತಾರೆ. ಉಡುಗೊರೆ ಇಟ್ಟಿಲ್ಲ ಎಂಬ ಸಿಟ್ಟೋ ?, ಏನು ಸುಡುಗಾಡೋ ....ಗೊತ್ತಿಲ್ಲ .ಇಲ್ಲಿ "ನಗುವಾಗ ಎಲ್ಲರೂ ನೆಂಟರು"ವಾಕ್ಯ ಅವರು ಮರೆತಿದ್ದಾರೆ ಎನಿಸುತ್ತದೆ.

ನಿರುಪದ್ರವಿಯಾಗಿ ದೂರ ಇದ್ದರೂ ಮನಸ್ಸಿಗೆ ಬೇಜಾರುಮಾಡಿಕೊಂಡು ಅವರೂ ಕೊರಗಿ ನಮ್ಮನ್ನು ಕೊರಗಿಸುತ್ತಾರೆ.
ಒಟ್ಟಾರೆ ಅತಿಥ್ಯ ಸ್ವೀಕರಿಸುವ ಸಡಗರದಲ್ಲಿ ಅವನ ತಿಥಿಯಾಗದಿದ್ದರೆ ಅದೇ ಅವನ ಬಾಗ್ಯ .

No comments: