Friday, November 19, 2010

'ಮಾಧ್ಯಮ'ಎಂಬ 'ಮಧ್ಯ'

ಇಂದು 'ಮಾದ್ಯಮ' ತನ್ನ ಉಚ್ಚ್ರಾಯ ಸ್ತಿತಿಯಲ್ಲಿದೆ. ತನಗೆ ಬೇಕೆನಿಸಿದನ್ನು ಬೇಕುಬೇಕಾದಂತೆ ನೀಡಲು ಸಶಕ್ತವಾಗಿದೆ.ಆದರೆ ಮಾಧ್ಯಮಗಳಿಂದ ಸಾಧ್ಯ ಎಂದು ನಾವು ಆನಾದಿಕಾಲದಿಂದಲೂ ಹೊಂದಿದ್ದ ನಂಬಿಕೆಯನ್ನು ನಾವು ಬದಲಿಸಿಕೊಳ್ಳಬೇಕಾಗಿದೆ. ಮಾಧ್ಯಮಗಳು ಸಮಾಜವನ್ನೇ ಬದಲಿಸಬಹುದು ಎಂಬ ಪರಿಕಲ್ಪನೆ ಸುಳ್ಳಾಗಿದೆ. ಬದಲಿಸಬಹುದೇನೋ ,ಆದರೆ ನಕಾರಾತ್ಮಕವಾಗಿ. ಸಕಾರತ್ಮಕವಾಗಿ ಬದಲಿಸುವ ಪ್ರಯತ್ನ ಬೇಕಾದಷ್ಟು ನಡೆದಿದೆ.ಆದರೆ ಸಕಾರಾತ್ಮಕ ತರಂಗಗಳನ್ನು ಸ್ವೀಕರಿಸಲು ನಾವು ಸಿದ್ದರಿಲ್ಲ!. ಆದುದರಿಂದ ಕಲೆ,ಸಂಸ್ಕೃತಿ, ವಿಜ್ಞಾನಕ್ಕೆ ಮೀಸಲಿಟ್ಟ ಚಾನಲ್ ಗಳು ಇಂದು ಟಿ.ಅರ್.ಪಿ.ರೇಟಿಂಗ್ ನಲ್ಲಿ ಮನೋರಂಜನೆಗೆ ಮೀಸಲಾದ ಚಾನಲ್ ಗಳಿಗಿಂತ ಹಿಂದಿದೆ. ಆ ಚಾನಲ್ ಗಳು ತಾವೂ ಸಹಾ ಶುದ್ಧ ಮನೋರಂಜನೆಯನ್ನು ನೀಡಲು,ಮೌಲ್ಯಗಳನ್ನು ಸಾರಲು ಶ್ರಮಿಸುತ್ತಿರುವುದಾಗಿ ಹೇಳಿಕೊಳ್ಳುತ್ತವೆ. ಅವುಗಳ ಮೌಲ್ಯಗಳು ಯಾವುದು?, ಬೆಳಗಾದ ಕೂಡಲೇ ದೇವರ ಹೆಸರು ಹಿಡಿದು ಅರಚುವುದು,ನಂತರ ಕೆಲವು ಪುಣ್ಯ ಕ್ಷೇತ್ರಗಳ ಪ್ರಚಾರ,ನಂತರ ಜ್ಯೋತಿಷಿಗಳಿಂದ ದಿನದ ಬವಿಷ್ಯ ಮತ್ತು ಹಿತವಚನ!.

ಆ ನಂತರ ಅಡಿಗೆ,ಹೊಸರುಚಿ,ಆಮೇಲೆ ಮಧ್ಯಾನದ ನಂತರ ಅತ್ತೆ ,ಸೊಸೆ,ಗಂಡ ಹೆಂಡ್ತಿಯರ ಜಗಳ ಪಿತೂರಿ ಇರುವ ಸಿರಿಯಲ್ ಸರಣಿ. ಇವೆಲ್ಲಾ ನಮ್ಮ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎಂಬುದು ಕೆಲವು ಶ್ರದ್ಧಾವಂತ ಪ್ರೇಕ್ಷಕರ ವಾದ.

ಹೇಗೆ?,

 ಹೇಗೆಂದರೆ ಇಲ್ಲಿ  ನಮ್ಮ ಸಮಾಜ ಒಪ್ಪುವಂಥಹ ಸಂಬಂಧಗಳು ಮತ್ತು ಡ್ರೆಸ್ ಕೋಡ್ ಗಳಿವೆ. ಗಂಡ,ಹೆಂಡ್ತಿ,ಮಾವ,ಅತ್ತೆ,ಅಪ್ಪ,ಅಮ್ಮ,ಅಣ್ಣ,ತಮ್ಮ ಇರುವ ಈ ಚೌಕಟ್ಟಿನಲ್ಲಿ ಜಗಳ,ಹೊಡೆದಾಟ,ಹಿಂಸೆ,ವಿಷಪ್ರಾಶನ,ಮೋಸ,ವಂಚನೆ,ಕೊಲೆ ಯಾವುದು ನಡೆದರೂ ಅದು ಸರ್ವ ಸಮ್ಮತ. ಎಲ್ಲಾ ಆದ ನಂತರ ಧಾರಾವಾಹಿಯಲ್ಲಿ ಅಳಿದುಳಿದ ಮಂದಿ ಪರಸ್ಪರ ಎಲ್ಲವನ್ನೂ ಕ್ಷಮಿಸಿ ಎಲ್ಲರೂ ಒಂದಾಗುವುದು ಕಥೆಯ ತಿರುಳು. ಈ ಸಂಬಂಧಗಳ ಚೌಕಟ್ಟಿನ ಹೊರಗೆ ದಾನ,ಧರ್ಮ ನಡೆದರೂ ಭೂಮಿಯ ಆಪೂರ್ವ ವಸ್ತುಗಳನ್ನು ತೋರಿಸಿದರೂ ಯಾವುದೇ ಉಪಯುಕ್ತ ವಿಷಯದ ಬಗ್ಗೆ ಹೇಳುತಿದ್ದರೋ ನಮಗೆ ಅದು ಹಾದರದಂತೆ ಕಾಣಿಸುತ್ತದೆ!. ನಮ್ಮದೆಂದು ನಮಗನ್ನಿಸದ ಯಾವುದೇ ವಿಷಯವನ್ನು ಖ೦ಡಿಸುವುದರಲ್ಲೂ ನಾವು ಹಿಂದೆಬೀಳುವುದಿಲ್ಲ.ಆದರೆ ಯಾರಾದರೂ ನಮಗೆ ಒದ್ದು ಇದು ನಿಮ್ಮದೇ ಎಂದು ನಮಗೆ ಹೇಳಿದರೆ ನಾವದನ್ನು ಸ್ವೀಕರಿಸುತ್ತೇವೆ. ಉದಾಹರಣೆಗೆ ವೇಶ ಭೂಷಣಗಳು. ನಮ್ಮ ಸಾಂಸ್ಕೃತಿಕ ಉಡುಗೆ ಅಂತಾ ಇಂದು ಶಾಲೆಗೆ,ಆಫೀಸಿಗೆ ಯಾರಾದ್ರೂ ಪಂಚೆ ಉಟ್ಕೊಂಡು,ಮೈಸೂರು ಪೇಟ ಹಾಕ್ಕೊಂಡು ಬರ್ತಾರಾ? ಆಟವ ಶ್ರೀ ರಾಮಚಂದ್ರನ ಹೇರ್ ಸ್ಟೈಲ್ ಅಂತಾ ಯಾರಾದರೂ ಜಟಾಜೂಟಧಾರಿಯಾಗಿ ಓಡಾಡಿದರೆ (ಬುದ್ದಿವಾದ)ಸುಮ್ಮನೆ ಅವನಷ್ಟಕ್ಕೆ ಅವನನ್ನು ಬಿಡ್ತಾರ?,ವಾಡಿಕೆಗಿನ್ತಾ ಒಂದಿಂಚು ಕೂದಲು ಬಿಟ್ಟರೂ ಅದನ್ನು ಆಕ್ಷೆಪಿಸುವಂತಹ ಕಂತ್ರಿಜನಗಳು ನಮ್ಮ ಸಮಾಜದಲ್ಲಿ ಜಾಸ್ತಿ. ಬ್ರಿಟಿಷರು ಒದ್ದದಕ್ಕೆ ನಾವು ಕ್ರಾಪ್ ಕಟ್ ಮಾಡಿಸುತ್ತೇವೆ. ಪ್ರಚಲಿತ ಫ್ಯಾಶನ್ ಗಳು ಭಾರತೀಯ ಸಮಾಜದ ಮೇಲೆ ಹಿಂದಿಂದಲೂ ಎಷ್ಟು ಪ್ರಭಾವ ಬೀರುತ್ತಾ ಬಂದಿದೆ ಎಂದರೆ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಟೊಂಕಕಟ್ಟಿದ್ದ ಶಿವಾಜಿ ಮಹಾರಾಜ ಕೂಡ ಮುಘಲ್ ರಂತೆ ಡ್ರೆಸ್ ಮಾಡಿಕೊಳ್ಳುತಿದ್ದ.

 

 ಹಲವು ಮನೆಗಳಲ್ಲಿ ರಾತ್ರಿಯಾದೊಡನೆ ಅಪರಾಧಕ್ಕೆ ಸಂಭದಿಸಿದ ಕ್ರೈ೦ ನ್ಯೂಸ್  ಮುಂತಾದವನ್ನು ನೋಡುವುದು ನಿತ್ಯಕರ್ಮವಾಗಿದೆ. ಇವರ ರಾತ್ರಿಯ ಎಚ್ಚರದ ಕ್ಷಣಗಳು ಹಿಂಸೆ,ಚೀತ್ಕಾರ,ಆಕ್ರಂದನಗಳಿಂದ ಕೂಡಿರುತ್ತವೆ.(ಇದು ನನ್ನ ಅಭಿಪ್ರಾಯವಷ್ಟೇ).ಇದರಿಂದಾಗುವ ಇತರ ಉಪಯೋಗಗಳನ್ನು ದಯವಿಟ್ಟು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

ದಿ: 16-11-2010 &17-11-10 ರ TV9 ಯಾವುದೋ ಪಾರ್ಕಿನಲ್ಲಿ ವಿಹಾರಕ್ಕೆ ಬರುವ ಜೋಡಿಗಳನ್ನು ಮಹಿಳೆಯರನ್ನು ಯಾವ ರೀತಿ ಕೆಲವು ಗುಂಪುಗಳು ಅತ್ಯಾಚಾರ ಮಾಡುತ್ತವೆ ಎಂಬುದನ್ನು ತೋರಿಸಿದ್ದರು.  ಇಂತಹವು ದಿನವೂ ಟಿ.ವಿ.ಯಲ್ಲಿ ಪ್ರಕಟವಾಗುತ್ತವೆ. ಆದರೆ ಅವುಗಳ ಬಗ್ಗೆ ಪ್ರತಿಭಟಿಸುವುದಿರಲಿ,ಆಕ್ರೋಶ ವ್ಯಕ್ತಪಡಿಸುವ ಸಂವೇದನಾಶೀಲತೆಯನ್ನು ಕಳೆದುಕೊಂಡಿರುವುದು ಒಂದು ರಾಷ್ಟ್ರೀಯ  ದುರಂತ . ನಮ್ಮ ಮೌಲ್ಯ ಸಂಸ್ಕೃತಿಗಳು ನಮ್ಮನ್ನು ಯಾವ ಮಟ್ಟದಲ್ಲಿ ಇರಿಸಿದೆ ಅಂದರೆ ಅವಿವಾಹಿತ ಜೋಡಿಗಳು ಒಂದು ನಿರ್ಜನ ಪ್ರದೇಶದಲ್ಲಿ ಸರಸ ಸಲ್ಲಾಪದಲ್ಲಿ ತೊಡಗುವುದು ನಮಗೆ ಎಷ್ಟು ದೊಡ್ಡ ಅಪರಾಧವಾಗಿ ಕಾಣುತ್ತದೆ ಎಂದರೆ ಅಲ್ಲಿ ಅವರನ್ನು ಹಿಡಿದು ಅತ್ಯಾಚಾರಕ್ಕೆ ಪ್ರಯತ್ನಿಸುವವರೇ ನಮ್ಮ ಈ ಶ್ರೇಷ್ಠ ಸಂಸ್ಕೃತಿ,ಮೌಲ್ಯಗಳ ಪ್ರತಿಪಾದಕರಂತೆ ಕಾಣುತ್ತಾರೆ!. ಹೀಗೆ ಕೆಲವೊಮ್ಮೆ ಶೋಷಣೆಯ ಮೂಲಕ ಮೊಬೈಲ್ನಿಂದ ತೆಗೆಯಲಾಗುವ ಚಿತ್ರಗಳು ಎಂ.ಎಂ.ಎಸ್.ಮೂಲಕ ಹರಿದಾಡುತಿದ್ದರೆ ಅವನ್ನ ನೋಡಿ ಆನಂದಿಸುವ ಒಂದು ವರ್ಗವನ್ನು ನಮ್ಮ ಸುತ್ತ ಮುತ್ತಲೇ ನಾವು ನೋಡಿರುತ್ತೇವೆ. ಈ ವರ್ಗಕ್ಕೆ ಸೇರಿದ ಒಬ್ಬ "ಮಹಾತ್ಮ"ನಿಗೆ ವಿದೇಶಗಳಿಂದ ಬರುವ ಬ್ಲೂ ಫಿಲಂ ಗಳು ಇಷ್ಟವಾಗುವುದಿಲ್ಲವಂತೆ.  ಹೀಗೆ ಕದ್ದು,ಮುಚ್ಚಿ ತೆಗೆಯುವ ತುಣುಕುಗಳೇ ಇಷ್ಟವಂತೆ,ಅಂತಹವು ಸಿಗುತಿಲ್ಲಾ ಅಂತಾ ಅವನಿಗೆ ದುಕ್ಖವಂತೆ!.

ಇದರಲ್ಲಿರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ. ಪರಸ್ಪರ ಸಮ್ಮತಿಯಿಂದ ವೃತ್ತಿಪರರಾದ ಪ್ರಾಪ್ತವಯಸ್ಕರು ಸಾರ್ವಜನಿಕ ಮನೋರಂಜನೆಗಾಗಿ ನಡೆಸುವ ಒಂದು ಕ್ರಿಯೆ ಒಂದೆಡೆ.

ಹಿಂಸೆಯ ಮೂಲಕ ಬಲವಂತವಾಗಿ ಅವರ ಒಪ್ಪಿಗೆ ಇಲ್ಲದೆ ತೆಗೆದ ದೃಶ್ಯಗಳು ಒಂದೆಡೆ.

ಇವೆರಡನ್ನೂ ಎದುರು ಇಟ್ಟರೆ ಯಾವುದನ್ನುಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ನಿಮ್ಮ  ಸಂವೆದನಾಶೀಲತೆಯ ಅಳತೆಗೋಲಾಗುತ್ತದೆ. "ನಾನು ಎರಡನ್ನೂ ನೋಡುವುದಿಲ್ಲ, ಶಾಂತಂ,ಪಾಪಂ" ಎನ್ನಬಹುದು ನೀವು. ಆದರೆ ಇದು ನಿಮ್ಮೊಳಗಿನ ಹಸಿವಿಗೊಂದು ಸವಾಲು. ನಾವು ಯಾವುದೇ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಧಾರಣವಾಗಿ ಅವು ನಮ್ಮ ಅಗತ್ಯಗಳನ್ನು ಪೂರೈಸುತ್ತವೆಯೇ? ಎಂಬುದನ್ನು ಗಮನಿಸುತ್ತೇವೆ. ಬೌತಿಕ ವಸ್ತುಗಳ ಅಗತ್ಯಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸುವುದು ತುಂಬಾ ಸುಲಭ.ಆದರೆ ಮಾನಸಿಕ ಅಗತ್ಯಗಳ ವಿಶ್ಲೇಷಣೆ ಕೊಂಚ ಕಷ್ಟ. ಆದರೂ ಪ್ರಯತ್ನಿಸೋಣ.ಅಂತಹ ಅಗತ್ಯಗಳು ನಮಗಿರುವುದಕ್ಕೆ ಕಾರಣವೇನು ಎಂದು ನಾವು ಆಲೋಚಿಸಬೇಕಾಗುತ್ತದೆ.ಇದೊಂದು ಸಂಕೀರ್ಣ ವಿಷಯ.ಇದರ ಬಗ್ಗೆ ನಾವು ಮಾಡುವ ವಿಶ್ಲೇಷಣೆಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಬಿನ್ನವಾಗಿರುತ್ತದೆ. ನಮ್ಮ ಮನಸ್ಸಿನಲ್ಲಿ ಬೇರು ಬಿಟ್ಟಿರುವ ಹಲವು ಅಂಶಗಳು ನಮ್ಮ ಮನಸ್ತಿತಿಯನ್ನು ನಿರ್ಧರಿಸುತ್ತವೆ. ಈ ಅಂಶಗಳು ಯಾವುವು ಎಂದು ನೀವು ಕಂಡು ಹಿಡಿದರೆ ಅವನ್ನು ನನಗೆ ಹೇಳಿ. ಕಮೆಂಟ್ ಕಾಲಂ ನಲ್ಲಿ ನಿಮಗೆ ಸದಾ ಸ್ವಾಗತವಿದೆ.

ಮತ್ತೆ ಮಾಧ್ಯಮಗಳ ವಿಷಯಕ್ಕೆ ಬರೋಣ. TV 9 ನಲ್ಲಿ ಪ್ರತಿದಿನವೂ ಒಂದು ದೃಶ ತುಣುಕು ಪ್ರಸಾರವಾಗುತ್ತೆ. ಒಬ್ಬ ತಪ್ಪಿತಸ್ತನನ್ನು ಸಾರ್ವಜನಿಕರು ಹಿಡಿದು ಥಳಿಸುತ್ತಿರುವ ದೃಶ್ಯ. ಉದಾಹರಣೆಗೆ ಒಬ್ಬನನ್ನು ಕಳ್ಳತನದ ಆರೋಪದ ಮೇಲೆ ಹಳ್ಳಿಗರು ಕಟ್ಟಿಹಾಕಿ ವಿವಿಧ ರೀತಿಯಲ್ಲಿ ಥಳಿಸುವ,ಹಿಂಸಿಸುವ  ದೃಶ್ಯ. ವ್ಯಭಿಚಾರದ ಆರೋಪದ ಮೇಲೆ ಒಬ್ಬ ಮಹಿಳೆಯನ್ನು ಒಂದು ಗುಂಪು ಥಳಿಸುವ ದೃಶ್ಯ. ಹೀಗೆ ಹಿಂಸೆಯ ನಿರಂತರ ವೈಭವೀಕರಣದಿಂದ ನೋಡುಗರ ಮನಸ್ತಿತಿಯ ಮೇಲೆ ಏನು ಪರಿಣಾಮವಾಗಬಹುದು.

ತಪ್ಪಿತಸ್ತರಿಗೆ ತಕ್ಕ ಶಾಸ್ತಿಯಾಗುತ್ತಿದೆ ಎಂದು ಕೆಲವರು ಹೇಳಬಹುದು. ಆದರೆ ಈ ತಪ್ಪು ಎನ್ನುವುದರ ಪರಿಭಾಷೆ ಏನು?,ಇದನ್ನು ನಿರ್ಧರಿಸುವ ಮಾನದಂಡಗಳೇನು?. ಎಷ್ಟೋ ಸಾರಿ ತಪ್ಪು ಗ್ರಹಿಕೆಯಿಂದ ಕೆಲವರನ್ನು ಥಳಿಸಿದ ಉದಾಹರಣೆಗಳಿವೆ. ಎಷ್ಟೋ ಕಡೆ ಊರಿನ ಪ್ರಮುಖರೆಲ್ಲಾ ಪಂಚಾಯತ್ ಸೇರಿ ಓಡಿ ಹೋದ ಪ್ರೇಮಿಗಳನ್ನು ಹೊಡೆದು ಸಾಯಿಸಿದ್ದಾರೆ. ಹೆಂಗಸರನ್ನು ಮಾಟಗಾತಿಯರೆಂಬ ಆರೋಪದ ಮೇಲೆ  ಹೊಡೆದು ಸಾಯಿಸಲಾಗಿದೆ. ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಹರಿಜನರಿಗೆ ಬಹಿಷ್ಕಾರ ಹಾಕಿದ್ದಾರೆ.ವೇದ ಕೇಳಿದ ಕಿವಿಗೆ  ಸೀಸ ಸುರಿದಿದ್ದಾರೆ. ಹೀಗಿರುವಾಗ ಇಂತಹಾ ಹಿಂಡು ಪ್ರವೃತ್ತಿಯನ್ನು ಬೆಳೆಸುವುದರಿಂದ ನಮಗೆ ನಿಮಗೆ ಏನು ಲಾಭ?.


No comments: