Sunday, November 5, 2017

ಚರ್ಚೆಗೆ ಸಿಗದ ಮೋದಿಯವರ ಒಂದು ನಿಜವಾದ ಸಾಧನೆ

ಯಾವ್ಯಾವುದೋ ಗ್ರೂಪ್ ಗಳಿಗೆ ದಿನಬೆಳಗಾದರೆ ಮೋದಿ,ಮೋದಿ ,ಮೋದಿ ಎಂದು ಅವೇ ಹಳೇ ಮೆಸೇಜು ಹಾಕುವ ಅಂಧಾಭಕ್ತರಿಗೆ ಮೋದಿಯವರ ಕೆಳಕಂಡ ಸಾಧನೆ ಕಾಣದೆ ಇರುವುದು ಅವರುಗಳ ಅಂಧತ್ವವನ್ನು ಸಾಬೀತುಪಡಿಸುತ್ತದೆ

ನೋಟು ಅಮಾನ್ಯೀಕರಣದ ಸಂಪೂರ್ಣವಾಗಿ ವಿಫಲವಾಗಿರುವುದನ್ನೇ ಅಸ್ತ್ರವಾಗಿಸಿಕೊಂಡು ಮಾಧ್ಯಮಗಳು ಆಳಿಗೊಂದು ಕಲ್ಲು ಎಂಬಂತೆ ಮೋದಿಯವರನ್ನು ಟೀಕಿಸುತ್ತಿವೆ. ಆದರೆ ಮೋದಿಯವರು ಮಾಡಿದ ಇನ್ನೊಂದು ಮಹಾತ್ಕಾರ್ಯವೆಂದರೆ  ವಿ.ಐ.ಪಿ ಗಳು ಉಪಯೋಗಿಸುತಿದ್ದ ಕೆಂಪು ದೀಪಗಳನ್ನು ಕಿತ್ತು ಹಾಕಿಸಿದ್ದು. ಈ ದೇಶದಲ್ಲಿ  ಜಾತಿ ತಾರತಮ್ಯ, ಆರ್ಥಿಕ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ತೆಗೆದು ಕೊಂಡಿದ್ದರೂ ಸ್ಟೇಟಸ್ ತಾರತಮ್ಯಗಳನ್ನು ನಿವಾರಿಸಬೇಕು ಎಂಬ ದೂರದೃಷ್ಟಿ ಯಾವುದೇ ನಾಯಕರಿಗೂ ಇಲ್ಲದಿದ್ದದ್ದು ಒಂದು ಅಚ್ಚರಿಯೇ ಸರಿ. ಸರ್ಕಾರಿ ಹಣವನ್ನು ಅವಲಂಬಿಸಿ ಸಮಾಜಕ್ಕೆ ಒಂದು ಹೊರೆಯಾಗಿರುವ ಒಂದು ವರ್ಗವು  ಅದನ್ನೇ ಒಂದು ಹಿರಿಮೆಯೆಂದು ಬಿಂಬಿಸುತ್ತಾ ರಾಜ ರೋಷವಾಗಿ ಓಡಾಡುತಿದ್ದದ್ದು ಪ್ರಜಾಪ್ರಭುತ್ವವನ್ನೇ ಅಣಕಿಸುವಂತಿತ್ತು. ಈ ನಿಟ್ಟಿನಲ್ಲಿ ಮೋದಿಯವರ ಈ ಕ್ರಮ ನೋಟು ಅಮಾನ್ಯೀಕರಣಕ್ಕಿಂತಲೂ ಮಹತ್ವದ್ದು. 
ಬ್ರಿಟಿಷ್ ಹಿನ್ನೆಲೆಯ ಅಧಿಕಾರಶಾಹಿಯಿಂದ ಕೆಲಸ ತೆಗೆಯುವುದು ಎಷ್ಟು ಕಷ್ಟ ಎಂದು ನೋಟು ಅಮಾನ್ಯೀಕರಣ ಮಾಡಿದ ಮೇಲೆ ಮೋದಿಗೆ ಚೆನ್ನಾಗಿ ಅನುಭವ ಆದಂತಿದೆ. ಜನರಿಗಾಗಿ ಯಾವುದಾದರೊಂದು ಒಳ್ಳೆಯ ಕೆಲಸ ಮಾಡ ಹೊರಟರೆ ನೂರಾಒಂದು ಪ್ರಶ್ನೆ ಹಾಕಿ ಜನರಿಗೆ  ನಯಾಪೈಸೆಯೂ ದಕ್ಕದಂತೆ ಮಾಡುವ ಪ್ರೊಫೆಶನಲ್ ಅಡಳಿತ ಯಂತ್ರವನ್ನು ಪಕ್ಕಕ್ಕಿಟ್ಟು  ಪೆಟ್ರೋಲ್ ಕಂಪನಿಗಳ ಮೂಲಕ ಹಳೇ ನೋಟು ಸಂಗ್ರಹಿಸಲು ಆರಂಭಿಸಿದರು. ಇನ್ನು ಡಿಜಿಟಲ್ ಎಕಾನಮಿ ಮಾಡುವ ಅವರ ಕನಸ್ಸನ್ನು ನುಚ್ಚು ನೂರು ಮಾಡಿದ್ದೇ ಈ ಅಧಿಕಾರಿಗಳು!. ಇವತ್ತು ನೀವು ಕಿರಾಣಿ ಅಂಗಡೀಲಿ ಕಾರ್ಡ್ ಸ್ವೈಪ್ ಮಾಡಬಹುದು, ಆದರೆ ಸರ್ಕಾರದ ಬೆಂಗಳೂರು ಒನ್ ನಲ್ಲಿ ಮಾಡಬೇಕು ಅಂದರೆ ಎಕ್ಸ್ಟ್ರಾ ಚಾರ್ಜ್ ಆಗುತ್ತದಂತೆ !.,ಆಗ ರೈಲ್ವೆನವರು ಸಹಾ ಕಾರ್ಡ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಪೋಸ್ಟ್ ಆಫೀಸ್ ನವರಿಗೂ ಸಹಾ ಕ್ಯಾಶೆ ಆಗಬೇಕು . ತಮಾಷೆ ನೋಡಿ, ಕರ್ನಾಟಕ ಮೊಬೈಲ್ ಒನ್ ಎಂಬ ವೆಬ್ ಸೈಟ್ ಇದೆ .ಅಲ್ಲಿ ನೀವು ಹಣ ಪಾವತಿಸಲು ಎರಡು ಆಪ್ಷನ್ ಇದೆ. ಒಂದು ಮೊಬಿಕ್ವಿಕ್  ಎಂಬ ಖಾಸಗಿ  ಸಂಸ್ಥೆ. ಇನ್ನೊಂದು paygovindia.gov.in ಎಂಬ ಕೇಂದ್ರ ಸರ್ಕಾರಿ ಸಂಸ್ಥೆ.  ಇದಕ್ಕೆ ಒಂದು ಪರ್ಸೆಂಟ್ ಸರ್ವಿಸ್ ಚಾರ್ಜ್ ಆಗುತ್ತದಂತೆ. ಆದರೆ ಖಾಸಗಿ ಮೊಬಿಕ್ವಿಕ್ ನಲ್ಲಿ ಪೇ ಮಾಡಿದರೆ  ಕ್ಯಾಶ್ ಬ್ಯಾಕ್ ಇದೆಯಂತೆ !!. ದೀಪದ ಕೆಳಗೆ ಕತ್ತಲು ಎಂಬಂತಾಗಿದೆ..ಕತ್ತರಿಯೇ ಸರಿ ಇಲ್ಲದೇ ಟೈಲರಿಂಗ್ ಶಾಪ್ ನಡೆಸಲು ಹೊರಟ ಮೋದಿಯವರ ಪ್ರಯೋಗ ಹೇಗೆ ತಾನೇ ಸಫಲವಾದೀತು?.
ವಿಚಾರ ಇರಲಿ,  ಅಡ್ಡಗಾಲು ಹಾಕಲು ನೆಪ ಹುಡುಕುವ ಭಾರತೀಯ  ಅಧಿಕಾರಶಾಹಿಯನ್ನು ದಾಟಿ  ಸೇವೆಯನ್ನು ಜನರಿಗೆ ತಲುಪಿಸುವುದು ಎಷ್ಟು ಕಷ್ಟ ಎಂದು ಅಂದು ಮೂದೀಜಿಯವರಿಗೆ ಗೊತ್ತಾಗಿರಬೇಕು. ಮೊದಲು ವ್ಯವಸ್ಥೆ ಸರಿ ಮಾಡಬೇಕು ,ನಾಲ್ಕಾಣೆ ಕೆಲಸ ಮಾಡದಿದ್ದರೂ  ವಾಹನದ  ಮೇಲೆ ರೆಡ್ ಲೈಟ್  ಹಾಕಿ ಠಳಾಯಿಸುವ  ದಂಡ ಪಿಂಡಗಳಿಗೆ ಒಂದು ಚಿಕ್ಕ ಬಿಸಿ ಮುಟ್ಟಿಸಿದರು . ಹಲವಾರು ಬೇಧಗಳಿಂದ ಬಳಲುತ್ತಿರುವ ಈ ಸಮಾಜದಲ್ಲಿ ಇನ್ನಷ್ಟು ಬಿರುಕು ಮೂಡಿಸುವ ಇಂತಹಾ ಸಂಪ್ರದಾಯಗಳನ್ನು ಮೊಲೋಚ್ಚಾಟನೆ ಮಾಡಬೇಕು. ಭಾರತದಂತಹಾ ಅಗಾದ ಜನಸಂಖ್ಯೆ ಇರುವ ದೇಶದಲ್ಲಿ  ಹುದ್ದೆಗಳನ್ನು ಅಲಂಕರಿಸುವ ಅರ್ಹತೆಗಳು ಯಾವಾಗಲೂ ವಿವಾದಾತ್ಮಕ ಹಾಗೂ ಪ್ರಶ್ನಾರ್ಹವಾಗಿಯೇ ಇರುತ್ತವೆ. ಅಂತಹಾ ಸಂಧರ್ಭದಲ್ಲಿ ಹುದ್ದೆಗಳ ನಿರ್ಲಜ್ಜ ವೈಭವೀಕರಣದಿಂದ ಆಡಳಿತಕ್ಕೆ ಯಾವುದೇ ಲಾಭವಾಗುವುದಿಲ್ಲ.
ಆದರೆ ಅದೇಕೋ ಮತ್ತೆ ಅಡಳಿತ ,ಸಮಾಜ ಸುಧಾರಣೆ ಯ ಕೆಲಸ ಅಲ್ಲಿಗೆ ಕೈ ಬಿಟ್ಟಂತೆ ಕಾಣುತ್ತಿದೆ.. ಈಗ  ಜೀ ಎಸ್ ಟಿ ಪ್ರಯೋಗದಲ್ಲಿ ಮುಳುಗಿಬಿಟ್ಟರು .ಅದೂ ಯಾಕೋ ಕೈ ಕೊಡುವಂತೆ ಕಾಣುತ್ತಿದೆ. ಕುದುರೆಯೇ ಸರಿಯಿಲ್ಲದೆ ರೇಸ್ ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನರಿತು ಮೋದಿಯವರು  ಅಡಳಿತ ಯಂತ್ರವನ್ನು ಸರಿಪಡಿಸುವ ಕೆಲಸಕ್ಕೆ ಕೈ ಹಾಕದಿದ್ದರೆ ಸರಿಯಾದ ಕೆಲಸಗಳಿಗೆ ತಪ್ಪಾದ ಫಲಿತಾಂಶ  ಬರುವುದರಲ್ಲಿ ಯಾವುದೇ ಸಂಶಯವಿಲ್ಲ..


ಆದರೆ ಮೋದಿಯವರ ಹೆಸರನ್ನೇ ಹೇಳಿಕೊಂಡು ಜನರನ್ನು ಯಾಮಾರಿಸಿ  ಅಧಿಕಾರ ಹಿಡಿದು ಕೆಂಪುದೀಪ ಗೂಟದ ಕಾರಿನಲ್ಲಿ ಓಡಾಡುವ ಕನಸು ಕಾಣುವ ಅವರ ಪುಡಾರಿ ಹಿಂಬಾಲಕರಿಗೆ ಯಾವುದೇ ಸುಧಾರಣೆ ಬೇಕಾಗಿಲ್ಲ.! 

-ನವ್ಯಾಂತ 

No comments: