Saturday, July 30, 2011

ಬಕಾಸುರ ನಾಯಿಗಳು..ನಿಸ್ಸಹಾಯಕ ನಾಗರೀಕತೆ

ಮಹಾಭಾರತ ಎಂಬ ಕಾದಂಬರಿಯಲ್ಲಿ ಏಕಚಕ್ರಪುರ ಎಂಬ ಊರಿದೆ. ಆ ಊರಿನಲ್ಲಿ ಒಂದು ವ್ಯವಸ್ತಿತ ಆಡಳಿತ ಇತ್ತು. ಅಲ್ಲಿನ ಜನರಿಗೆ ಪಾಂಚಾಲದ  ರಾಜನ ಆಸ್ಥಾನದ ಸಂಪರ್ಕ ಇತ್ತು.ಆದರೂ ಇಲ್ಲಿನ ಜನ ಊರಿನ ಹೊರಗೆ ಬೆಟ್ಟದಲ್ಲಿ ವಾಸಿಸುತಿದ್ದ ಭಕಾಸುರ ಎಂಬ ಧೈತ್ಯನಿಗೆ ಕಾಲಕಾಲಕ್ಕೆ  ಒಂದು ಬಂಡಿ ಆಹಾರ ಪಧಾರ್ಥಗಳು ಮತ್ತು ಒಬ್ಬ ಮನುಷ್ಯನನ್ನು ಆಹಾರವಾಗಿ ಕಳುಹಿಸುತಿದ್ದರು. ಹಿಡಿಂಬಾಸುರನಂತೆ ಬಕಾಸುರ ದೊಡ್ಡ ಕಾಡಿನಲ್ಲಿ ವಾಸಿಸುವನಲ್ಲ. ಆತ ಒಂದು ವ್ಯವಸ್ತಿತ ಸಮಾಜದ ರಕ್ತ ಹೀರಿ ಬದುಕುತಿದ್ದಾತ. ಅಂದಿನ ಮಹಾ ಪರಾಕ್ರಮಿ ರಾಜರಿಗೆ, ಪವಾಡಸಿದ್ದರಾದ ಋಷಿ ಮುನಿಗಳಿಗೆ ಈ ಊರಿನ ಜನರ ಕಷ್ಟವನ್ನು ಪರಿಹರಿಸುವುದು ಅಗತ್ಯ ಎಂದೆನ್ನಿಸಲಿಲ್ಲ. ಗಮನಿಸಿ ,ಇದು ಒಂದು ನಾಗರಿಕ ವ್ಯವಸ್ಥೆ.
ಈಗ ಇದೇ ರೀತಿಯ ಸಮಸ್ಯೆಯನ್ನು ಬೆಂಗಳೂರು ನಗರ ಎದುರಿಸುತ್ತಿದೆ. ಬೀದಿ ನಾಯಿಗಳ ಹಿಂಡು  ಬಡ ಮಕ್ಕಳನ್ನು ಎಗ್ಗಿಲ್ಲದೇ ಬೇಟೆಯಾಡುತ್ತಿವೆ. ಈ ನಾಯಿಗಳಿಗೆ ಕಾನೂನಿನ ರಕ್ಷಣೆ ಬೇರೆ!. ಜನರಿಂದ ಚುನಾಯಿತವಾದ ಮಹಾ ನಗರ ಪಾಲಿಕೆ ಕೂಡ ಈ ನರಹತ್ಯೆಯನ್ನು ನೋಡಿಯೂ ಅಸಹಾಯಕವಾಗಿ ಕುಳಿತಿದೆ.ಸಮಾಜದ ಚುಕ್ಕಾಣಿ ಹಿಡಿದ ಯಾರಿಗೂ ಇದು ಆದ್ಯತೆಯ ಮೇಲೆ ಪರಿಗಣಿಸಬೇಕಾದ ಎನಿಸುವುದಿಲ್ಲ. ಇದು ನಾಗರೀಕ ಸಮಾಜದ ದುರಂತವಲ್ಲವೇ ?

No comments: